ದೇಶಿ ಉಡುಪಿನಲ್ಲಿ ಕುಂಭಹೊತ್ತು ಎತ್ತಿನ ಬಂಡಿಯಲ್ಲಿ ಬಂದ ವಿದ್ಯಾರ್ಥಿಗಳು
ಗ್ರಾಮೀಣ ಸೊಗಡಿನಿಂದ ಕಂಗೊಳಿಸಿದ ಸರ್ಕಾರಿ ಕಾಲೇಜು
ನರೇಗಲ್ : (May15_2025)
ಕಾಲೇಜಿನ ಆವರಣದಲ್ಲಿ ತಳಿರು ತೋರಣ, ಅಡಕೆ ಹೊಂಬಾಳೆ ಯಲ್ಲಿ ಸಿಂಗರಿಸಿದ ಕಳಸ, ಎತ್ತು, ಬಂಡಿ, ಕೂರುಗಿ, ನಗಾ, ಒಣಕೆ, ವಿವಿಧ ಧಾನ್ಯಗಳ ರಾಶಿ, ಸೇರು, ಬೆಲ್ಲ, ವಿವಿಧ ಪೂಜಾ ಸಾಮಗ್ರಿಗಳು ಒಂದೆಡೆಯಾದರೆ, ಸೀರೆಯುಟ್ಟ ನೀರೆಯರ ವಯ್ಯಾರ. ಗತಕಾಲದ ವೈಭವಕ್ಕೆ ಮರಳಿದಂತೆ ಭಾಸವಾಗುವ ದೃಶ್ಯ ಇನ್ನೊಂದೆಡೆ ಸೆಳೆಯುತಿತ್ತು. ಹೊರಗಿನಿಂದ ನೋಡುವವರಿಗೆ ಪಕ್ಕಾ ಮದುವೆ ಮನೆಯಂತೆ ಕಾಣುತಿತ್ತು. ಆದರೆ ಇದು ನರೇಗಲ್ ಪಟ್ಟಣ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಜಾನಪದ ಉತ್ಸವ ಕಾರ್ಯಕ್ರಮ ಎನ್ನುವುದು ವಿಶೇಷವಾಗಿತ್ತು. ಈ ಮೂಲಕ ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಗ್ರಾಮೀಣ ಸೊಗಡನ್ನು ಹಚ್ಚಹಸಿರಾಗಿಡುವ ಪ್ರಯತ್ನವನ್ನು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮಾಡಿದರು. ಇವರ ಸಂಭ್ರಮವನ್ನು ನೋಡಲು ಮಜರೆ ಹಳ್ಳಿ ಗ್ರಾಮಸ್ಥರು, ಪಾಲಕರು, ಸ್ಥಳೀಯರು ಬಂದಿದ್ದು ವಿಶೇಷವಾಗಿತ್ತು.
ಸಮೀಪದ ಕೋಡಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಎದುರಿನಿಂದ ಆರಂಭವಾದ ಪದವಿ ಕಾಲೇಜಿನ ಜಾನಪದ ಉತ್ಸವದ ವೇಳೆ ಎತ್ತಿನ ಬಂಡಿಯಲ್ಲಿ ಪ್ರಾಧ್ಯಾಪಕರು ಬಂದರೆ, ಅದರ ಮುಂದೆ ದೇಶಿ ಉಡುಪಿನಲ್ಲಿ ಕುಂಭಹೊತ್ತ ವಿದ್ಯಾರ್ಥಿನಿಯರು ಗ್ರಾಮದ ಪ್ರಮುಖ ಬೀದಿಯಲ್ಲಿ ಜಾನಪದ ಹಾಡುಗಳನ್ನು ಹಾಡುತ್ತ ಸಾಗಿದರು. ಇದನ್ನು ನೋಡಲು ಮಹಿಳೆಯರು, ನಿವಾಸಿಗಳು ಮನೆಯಿಂದ ಹೊರಗೆ ಬಂದು ಫೋಟೆ ಸೆರೆಹಿಡಿಯುತ್ತಿದ್ದರು. ಕಾಲೇಜಿಗೆ ತಲುಪಿದ ನಂತರ ಪೂಜೆ ಮಾಡಿ, ಆರತಿ ಬೆಳಗೆ ಸ್ವಾಗತಿ ಕೋರಲಾಯಿತು.
ಈ ವೇಳೆ ಉಪನ್ಯಾಸ ನೀಡಿದ ಗದಗ ಎಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ಬಾಹುಬಲಿ ಜೈನರ, ಹಳ್ಳಿಗರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದ ಈ ಮಹಾವಿದ್ಯಾಲಯವು ಗ್ರಾಮೀಣ ಸೊಗಡಿನಿಂದ ಕಂಗೊಳಿಸಿದೆ. ಪ್ರತಿ ವಿದ್ಯಾರ್ಥಿಯು ತನ್ನ ಮನೆಯ ಕಲೆ, ಸಂಸ್ಕೃತಿ, ಉಡುಪು ಪ್ರದರ್ಶಿಸಲು ವೇದಿಕೆ ಮಾಡಿಕೊಟ್ಟಿದೆ. ಆದರೆ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು. ರೈತ ಭೂಮಿಯನ್ನು ನಂಬಿ ಬೀಜ ಬಿತ್ತುತ್ತಾನೆ, ಆದರೆ ಅವನನ್ನು ಪ್ರಕೃತಿ ಕೈಬಿಡುವುದಿಲ್ಲ. ಫಲ ಬರುವವರಗೆ ತಾಳ್ಮೆಯಿಂದ ಕಾಯುತ್ತಾನೆ. ಹಾಗೆ ವಿದ್ಯಾರ್ಥಿಗಳು ಶಿಕ್ಷಕರನ್ನು ನಂಬಿ ಕಲಿಯಬೇಕು, ಅವರನ್ನು ಗೌರವಿಸಬೇಕು, ತಾಳ್ಮೆಯಿಂದ ಗುರುಗಳು ಹೇಳಿದ ಮಾತನ್ನು ಪಾಲಿಸಬೇಕು ಆಗ ಫಲ ಸಿಗುತ್ತದೆ ಎಂದರು. ಕೋಟಿ ರೂಪಾಯಿ ಕೊಟ್ಟರ ಸಿಗದ ಸಾಹಿತ್ಯ ಜಾನಪದದಲ್ಲಿದೆ, ಇದರಲ್ಲಿ ಹೆತ್ತವರನ್ನು ಹೇಗೆ ಗೌರವಿಸಬೇಕು, ಅತಿಥಿ ಸತ್ಕಾರ ಹೇಗೆ ಇರಬೇಕು ಎನ್ನುವ ಮಾರ್ಗದರ್ಶನವಿದೆ ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಮಾತನಾಡಿ, ಜನರ ನಡುವೆ ಬದುಕುವ ಕಲೆಯನ್ನು ಕಲಿಸಿಕೊಡುವ ಶಿಕ್ಷಣವೇ ಜಾನಪದ ಸಂಸ್ಕೃತಿಯಾಗಿದೆ. ಜಾನಪದಕ್ಕೆ ಜಾತಿ, ಮತ, ಪಂತ, ಧರ್ಮದ ಬೇಧವಿಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ನೀತಿಯನ್ನು ತಿಳಿಸುತ್ತದೆ ಎಂದರು. ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಹಳ್ಳಿಸೊಗಡಿನ ಸ್ಪರ್ಧೆಗಳು, ಜಾನಪದ ವಿಭಾಗಧ ಸ್ಪರ್ಧೆಗಳು ನಡೆದವು. ಈ ವೇಳೆ ಶಿವಮೂರ್ತಿ ಕುರೇರ, ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಜಯಶ್ರೀ ಮುತಗಾರ, ಅಂಜನಮೂರ್ತಿ ಕೆ. ಎಚ್, ಅನೀಲಕುಮಾರ, ಶಶಿಕಲಾ ವಿ. ಎಸ್, ಕೆ. ಆರ್. ಪಾಟೀಲ, ನಸರೀನಾಬಾನು ಜಮಾದಾರ, ವಿರೂಪಾಕ್ಷ, ಶಿವಪ್ಪ ಕುರುಬರ, ಅಯ್ಯಪ್ಪ, ಎಂ. ಎಫ್. ತಹಶೀಲ್ದಾರ, ವಿ. ಸಿ. ಇಲ್ಲೂರ, ವಿ. ಕೆ. ಸಂಗನಾಳ, ಕೆ. ಎನ್. ಕಟ್ಟಿಮನಿ, ಕಿರಣ ರಂಜಣಗಿ, ಎನ್. ಎಸ್. ಹೊನ್ನೂರ, ಚಂದ್ರು ಸಂಶಿ, ಬಸವರಾಜ ಎಸ್. ಮಡಿವಾಳರ, ಬಿ. ಕೆ. ಕಂಬಳಿ, ಶಶಿಕಲಾ ಕಿನ್ನಾಳ, ವಿನಯಶ್ರೀ ಪರಯ್ಯನಮಠ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ ಇದ್ದರು.
Post a Comment