ನರೇಗಲ್ : (May_21_2025)
ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆ-1 ರಲ್ಲಿ ಫೇಲ್ ಆದ ಕಾರಣದಿಂದಾಗಿ ಪಟ್ಟಣದ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ರಾಕೇಶ್ ನಾಗೇಶಪ್ಪ ಮಣ್ಣೋಡ್ಡರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಕನ್ನಡ(60), ಇಂಗ್ಲಿಷ್(48) ವಿಷಯಗಳಲ್ಲಿ ಪಾಸಾಗಿದ್ದು, ಉಳಿದ ಹಿಂದಿ(34), ಗಣಿತ(34), ವಿಜ್ಞಾನ(35), ಸಮಾಜ ವಿಜ್ಞಾನ(27) ವಿಷಯಗಳಲ್ಲಿ ಫೇಲಾಗಿದ್ದಾನೆ. ಫಲಿತಾಂಶ ಪ್ರಕಟವಾದ ದಿನದಿಂದ ಮನಸ್ಸಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯು, ಅದನ್ನೇ ಹೆಚ್ಚಾಗಿ ವಿಚಾರ ಮಾಡುತ್ತಿದ್ದನು ಎಂದು ಮೂಲಗಳು ತಿಳಿಸಿವೆ. ಇದೆ ವಿಷಯಕ್ಕೆ ಮನನೊಂದು ನರೇಗಲ್ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಶಾಲೆಯ ಆವರಣದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿದ್ಯಾರ್ಥಿಯು ಯಾವುದೇ ಖಿನ್ನತೆಗೆ ಒಳಗಾಗಿರಲಿಲ್ಲ ಮಾನಸಿಕ ಹಾಗೂ ದೈಹಿಕವಾಗಿ ಸಧೃಡನನಾಗಿದ್ದ, ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದ, ಶಾಲೆಯ ಕಬಡ್ಡಿ ತಂಡದ ನಾಯಕತ್ವ ವಹಿಸಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದರು. ವಿದ್ಯಾರ್ಥಿಯ ನಡುವಳಿಕೆ ಹಾಗೂ ಆಟದಲ್ಲಿನ ಗಮನಾರ್ಹ ಸಾಧನೆ ಗುರುತಿಸಿ, ಶಾಲೆಯ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿದ್ದೇವೆ. ಈಚೆಗೆ ಶಾಲೆಗೆ ಬಂದು ಸೋಮವಾರದಿಂದ ಆರಂಭವಾಗುವ ಪರೀಕ್ಷೆ-2ರ ಪ್ರವೇಶ ಪತ್ರವನ್ನು ಸಹ ಪಡೆದುಕೊಂಡು ಹೋಗಿದ್ದಾನೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಕುರಿತು ತಿಳಿದು ಬೇಸರವಾಗಿದೆ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ. ಬಿ. ಸಜ್ಜನರ್ ತಿಳಿಸಿದರು.
ರಾಕೇಶ್ ಉತ್ತಮ ಕಬಡ್ಡಿ ಆಟಗಾರನಾಗಿದ್ದ, ಮುಕ್ತ ಹಾಗೂ ಕೆಜಿ ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲೆಡೆ ಹೆಸರು ಮಾಡಿದ್ದ. ಉತ್ತಮ ಆಟಗಾರ, ಓದಿನ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ನೋವಾಗಿದೆ ಎಂದು ಸಹ ಆಟಗಾರರು ತಮ್ಮ ನೋವನ್ನ ತೋಡಿಕೊಂಡರು.
ಮೃತ ವಿದ್ಯಾರ್ಥಿಯ ತಂದೆ ಮನೆ ಹಾಗೂ ಕಟ್ಟಡಗಳನ್ನು ಕಟ್ಟುವ ಕೆಲಸ ಮಾಡುತ್ತಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ರಾಕೇಶ್ ಕಿರಿಯ ಮಗನಾಗಿದ್ದ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment