ಗ್ರಂಥಾಲಯ ಶಿಕ್ಷಣ ಕ್ಷೇತ್ರದ ಹೃದಯಭಾಗ; ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ
---
ನರೇಗಲ್ : (Aug_14_2026)
ಮನುಷ್ಯನ ಆಲಸ್ಯವನ್ನು ದೂರಮಾಡಿ, ಜ್ಞಾನವಂತರನ್ನಾಗಿಸಿ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಡುವ ಅಪಾರ ಶಕ್ತಿ ಪುಸ್ತಕಗಳಿಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಡಾ. ಕಸ್ತೂರೆವ್ವ ದಳವಾಯಿ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಂಥಾಲಯವು ಜ್ಞಾನಾರ್ಜನೆ, ಸಂಶೋಧನೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ. ಇದು ಶಿಕ್ಷಣ ಕ್ಷೇತ್ರದ ಹೃದಯಭಾಗವಿದ್ದಂತೆ. ಇದನ್ನು ಅರಿತು ಪ್ರತಿಯೊಬ್ಬರೂ ಗ್ರಂಥಾಲಯದ ಸಂಪೂರ್ಣ ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಮುನ್ನಡೆದಾಗ ಮಾತ್ರ ಜೀವನ ಸಾರ್ಥಕತೆ ಪಡೆಯುತ್ತದೆ. ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕವಾಗಿ ಓದುವ ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಗ್ರಂಥಪಾಲಕರ ಶ್ರಮ ಅಪಾರವಾದದ್ದು. ಇಂದಿನ ಗ್ರಂಥಪಾಲಕರು ಕೇವಲ ಭೌತಿಕ ಪುಸ್ತಕಗಳಿಗೆ ಸೀಮಿತವಾಗದೆ, ಇ-ಬುಕ್ಸ್, ಇ-ಜರ್ನಲ್ಗಳು ಹಾಗೂ ಡಿಜಿಟಲ್ ಲೈಬ್ರರಿಗಳನ್ನು ನಿರ್ವಹಿಸುವ ಆಧುನಿಕ ತಾಂತ್ರಿಕ ಕೌಶಲ್ಯವನ್ನೂ ಮೈಗೂಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು ಹಾಗೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ವೀಣಾ ಖನ್ನೂರ ಮಾತನಾಡಿ, ಗ್ರಂಥಪಾಲಕರು ಕೇವಲ ಪುಸ್ತಕಗಳನ್ನು ಜೋಡಿಸಿಡುವವರಲ್ಲ; ಅವರು ಜ್ಞಾನದ ಮಾರ್ಗದರ್ಶಕರು, ಸಂಶೋಧಕರ ಸಹಾಯಕರು ಮತ್ತು ಓದುಗರಲ್ಲಿ ಜ್ಞಾನದ ದಾಹವನ್ನು ಹೆಚ್ಚಿಸುವ ದಾರಿದೀಪಗಳು. ವಿದ್ಯಾರ್ಥಿಗಳು ನಿರಂತರವಾಗಿ ಗ್ರಂಥಾಲಯಕ್ಕೆ ಆಗಮಿಸಿ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಪ್ರಾಧ್ಯಾಪಕರಾದ ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಅನಿಲಕುಮಾರ, ಶಶಿಕಲಾ ವಿ. ಎಸ್., ಶಿವಪ್ಪ ಕುರಬರ, ವಿರೂಪಾಕ್ಷ ಆರ್., ಅಯ್ಯಪ್ಪ, ಶಂಕರಗೌಡ ಪಾಟೀಲ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕೆನಕೊಪ್ಪ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Post a Comment