ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಬೇಕಾಬಿಟ್ಟಿ ಕಾಮಗಾರಿ : ರಾಹುಲ್ ಶೆಟ್ಟರ್ ಆರೋಪ
ಶೀಘ್ರ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ : ರಾಹುಲ್ ಶೆಟ್ಟರ್ ಹೇಳಿಕೆ
ಬಾಗಲಕೋಟೆ : (Feb_13_2026)
ಉತ್ತರ ಕರ್ನಾಟಕದ ಮೆಡಿಕಲ್ ಹಬ್ ಎಂದೆ ಪ್ರಸಿದ್ಧಿಯಾಗಿರುವ ಬಾಗಲಕೋಟೆ ನಗರದ ಹೃದಯ ಭಾಗದಲ್ಲಿ ರಸ್ತೆ ಪಕ್ಕದಲ್ಲಿ ನಡೆದ ಪೈಪ್ ಲೈನ್ ಕಾಮಗಾರಿ ಮಾಡಿ, ಪೂರ್ಣ ಮುಚ್ಚದೆ ಹೋಗಿದ್ದಾರೆ. ನಗರದ ಜನನಿಬಿಡ ಪ್ರದೇಶವಾದ
ರೈಲ್ವೆ ನಿಲ್ದಾಣದ ಬಳಿ ಇರುವ ಶಕುಂತಲಾ ಆಸ್ಪತ್ರೆ ಮತ್ತು ಮಾನೆ ಆಸ್ಪತ್ರೆ ಎದುರೆ ಅವಾಂತರ ಸೃಷ್ಟಿಯಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ರಾಹುಲ್ ಶೆಟ್ಟರ್ ಆರೋಪಿಸಿದ್ದಾರೆ. ಈ ಅವ್ಯವಸ್ಥೆಯಿಂದ ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸ್ ಗಳಿಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೂ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ. ಜೊತೆಗೆ ಪಕ್ಕದಲ್ಲೆ ರೈಲ್ವೇ ನಿಲ್ದಾಣ ವಿರುವುದರಿಂದ ಪ್ರವಾಸಿಗರೂ ಸೇರಿದಂತೆ ದಿನಂಪ್ರತಿ ಸಾವಿರಾರು ಜನರು ಓಡಾಡುತ್ತಾರೆ. ಕೆಲಸ ಈಗ ಪ್ರಗತಿಯಲ್ಲಿದ್ದು, ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ಅಲ್ಲದೇ, ಜಿಲ್ಲಾಡಳಿತ ಕೂಡ ಇಲ್ಲೆ ಇರುವುದರಿಂದ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಮಧ್ಯೆ, ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಅಧಿಕಾರಿಗಳಿಗೆ ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ ಎಂದು ರಾಹುಲ್ ಶೆಟ್ಟರ್ ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಅವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.



Post a Comment